ಹುಬ್ಬಳ್ಳಿ: ವಕ್ಫ್ ಆಸ್ತಿ ಸಂರಕ್ಷಣೆ, ಸಮುದಾಯದ ಒಳಿತಿಗಾಗಿ ಬಳಸಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ವಕ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಕ್ಫ್ಆಸ್ತಿ ಸರಿಯಾಗಿ ನಿರ್ವಹಣೆ ಮಾಡಿದರೆ ಸರ್ಕಾರದಿಂದ ನಾವು ಅನುದಾನ ಕೇಳುವ ಪರಿಸ್ಥಿತಿ ಯೇ ಬರುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ 47 ಸಾವಿರ ವಕ್ಫ್ಆಸ್ತಿ ಗಳಿದ್ದು, 23 ಸಾವಿರ ಆಸ್ತಿ ಗಳು ಒತ್ತುವರಿ, ವಿವಾದ, ನ್ಯಾಯಾಲಯದಲ್ಲಿ ದಾವೆ ಯಿಂದ ಕೂಡಿವೆ. ಈ ಆಸ್ತಿ ಸಂರಕ್ಷಣೆ ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.
ವಕ್ಫ್ ಆಸ್ತಿ ಸಂರಕ್ಷಣೆ ಮಾಡಿ ತಾಲೂಕಿಗೊಂದು ಆಸ್ಪತ್ರೆ, ಜಿಲ್ಲೆಗೊಂದು ಮಹಿಳಾ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ವಕ್ಫ್ ಮಂಡಳಿಯಲ್ಲಿ ಕೆಲಸ ಮಾಡುವವರಿಗೆ ಸಮುದಾಯದ ಸೇವೆ ಮಾಡುವ ಅವಕಾಶ ಸಿಗುತ್ತದೆ.
ವಕ್ಫ್ ಬೋರ್ಡ್ನಲ್ಲಿ ಹಲವಾರು ಸಮುದಾಯಕ್ಕೆ ನೇರವಾಗುವ ಕೆಲಸ ಮಾಡಿದ್ದೇವೆ. ತಾಲೂಕಿಗೆ ಒಂದು ಫ್ರೀಜರ್, ಜಿಲ್ಲೆಗೆ ಒಂದು ಆಂಬುಲೆನ್ಸ್ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಒಂದು ವಾಹನ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ದರ್ಗ ಗಳನ್ನು ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಯೋಜನೆ ಸಿದ್ದಪಡಿಸಲಾಗಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್ ಡಿಎ ಸರ್ಕಾರದ ಉದ್ದೇಶಿತ ವಕ್ಱ್ ತಿದ್ದುಪಡಿ ಕಾಯ್ದೆ 2024ಕ್ಕೆ ಕರ್ನಾಟಕ ವಕ್ಫ್ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಸಭೆ ನಡೆಸಿ ನಿರ್ಣಯ ಕೈಗೊಂಡಿರುವ ವಕ್ಫ್ ಬೋರ್ಡ್ ಕೇಂದ್ರ ಸರ್ಕಾರದ ಸೂಚನೆಯಂತೆ ವಕ್ಫ್ ಮಂಡಳಿಯ ಬಗೆಗಿನ ಯಾವ ಮಾಹಿತಿಯನ್ನೂ ಕೇಂದ್ರ ಜಂಟಿ ಸಲಹಾ ಸಮಿತಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದರ ಬೆನ್ನಲ್ಲೇ ಮುಸ್ಲಿಂ ಧರ್ಮಗುರುಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಉದ್ದೇಶಿತ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಧಕ ಬಾಧಕಗಳನ್ನು ವಿವರಿಸಿದೆ. ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ಒಂದು ಸಮುದಾಯದ ಜನರನ್ನು ಗುರಿ ಮಾಡಲು ಹೊರಟಿದೆ ಎಂದು ಆರೋಪಿಸಿದೆ. ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಹ ಉಪಸ್ಥಿತರಿದ್ದರು.
