ಹುಬ್ಬಳ್ಳಿ: ಇ.ಡಿ ಅಧಿಕಾರಿಗಳ ಉಡುಗೆಲ್ಲಿ ಬಂದು ಚನ್ನಮ್ಮ ವೃತ್ತದ ಬಳಿಯ ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿ ಸುದಿನ್ ಎಂ.ಆರ್. ಅವರಿಂದ 3.2 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣ ನಡೆದ ಸ್ಥಳ ಹಾಗೂ ಕಾರು ಸಂಚರಿಸಿದ್ದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಪರಿಶೀಲನೆ ಕಾರ್ಯವೂ ಚುರುಕಿನಿಂದ ನಡೆದಿದೆ. ಅಲ್ಲದೇ, ಮೊಬೈಲ್ ಸಿಡಿಆರ್ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ದೊರೆತಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.
ಇ.ಡಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದಿದ್ದ ಐವರ ತಂಡ, ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿ ಸುದಿನ್, ಕೆಲಸಗಾರ ವಿವೇಕ ಜತೆಗೆ ನ.19ರಂದು ಧಾರವಾಡದಿಂದ ಹುಬ್ಬಳ್ಳಿಗೆ ಬಂದಾಗ ಈ ತಂಡ ದಾಳಿ ನಡೆಸಿದೆ. ಅದರಲ್ಲೂ ಹಿಂದಿಯಲ್ಲಿ ಮಾತನಾಡಿ ಕೆಲವು ಗುರುತಿನ ಚೀಟಿ ತೋರಿಸಿದ್ದಾರೆ. ಅಲ್ಲದೇ, ಅಕ್ರಮ ಚಿನ್ನಾಭರಣ, ಹಣ ಸಾಗಾಟ ಮಾಡುತ್ತಿರುವ ಮಾಹಿತಿ ಬಂದಿದೆ ಎಂದು ಬೆದರಿಸಿ ಅವರ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಸಿಮ್ ಕಾರ್ಡ್ ತೆಗೆದಿದ್ದಾರೆ. ನಂತರ ಇಬ್ಬರ ಮೇಲೂ ಹಲ್ಲೆ ನಡೆಸಿ ಅವರ ಬಳಿಯಿದ್ದ 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂ. ಕಿತ್ತುಕೊಂಡಿದ್ದಾರೆ. ನಂತರ ಅವರನ್ನು ವಿಚಾರಣೆ ನಡೆಸುವ ನೆಪದಲ್ಲಿ ಎರ್ಟಿಗಾ ಕಾರಿನಲ್ಲಿ ಹತ್ತಿಸಿಕೊಂಡು ಬೆಳಗಾವಿಯತ್ತ ಕರೆದೊಯ್ದಿದ್ದಾರೆ.
ಈ ವೇಳೆ ಕೆಲಸಗಾರ ವಿವೇಕನನ್ನು ಕಿತ್ತೂರ ಬಳಿ ಮತ್ತು ಸುದೀನ್ ಅವರನ್ನು ಎಂ.ಕೆ. ಹುಬ್ಬಳ್ಳಿಯಲ್ಲಿ ಬಿಟ್ಟು ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ತಂಡ ತನಿಖೆ ಮುಂದುವರಿಸಿದೆ.
ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಜ್ಯುವೆಲರ್ ಶಾಪ್ಗಳಿಗೆ ಚಿನ್ನಾಭರಣ ಪೂರೈಸುತ್ತಿದ್ದರು. ಅದರಂತೆ ಆರ್ಡರ್ ಪಡೆದುಕೊಂಡು ಬಂದು ಅವುಗಳನ್ನು ನೀಡಲು ನ.15ರಂದು ಇಲ್ಲಿಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿಯ ಚನ್ನಮ್ಮ ವೃತ್ತದ ಬಳಿ ಲಾಡ್ಜ್ನಲ್ಲಿ ಚಿನ್ನಾಭರಣ ಸಮೇತ ತಂಗಿದಾಗ ಈ ಘಟನೆ ನಡೆದಿದೆ.
